ಮೂರು ಸೇವೆಗಳ ಅಗ್ನಿವೀರರ ಮೊದಲ ಬ್ಯಾಚ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ | JANATA NEWS
ನವದೆಹಲಿ : ಪ್ರಪ್ರಥಮ ಅಗ್ನಿಪಥ್ ಯೋಜನೆಯ ಪ್ರವರ್ತಕರಾದ ಅಗ್ನಿವೀರರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು. ತಮ್ಮ ಪ್ರಾಥಮಿಕ ತರಬೇತಿಯನ್ನು ಆರಂಭಿಸಿರುವ ಮೂರು ಸೇವೆಗಳ ಅಗ್ನಿವೀರರ ಮೊದಲ ಬ್ಯಾಚ್ ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಅವರು ಮಾತನಾಡಿದರು.
ಈ ಪರಿವರ್ತನಾ ನೀತಿಯು ನಮ್ಮ ಸಶಸ್ತ್ರ ಪಡೆಗಳನ್ನು ಸಶಕ್ತಗೊಳಿಸುವಲ್ಲಿ ಮತ್ತು ಅವರನ್ನು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುವಲ್ಲಿ ಹೊಸ ಇತಿಹಾಸವನ್ನೇ ಬರೆಯಲಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಯುವ ಅಗ್ನಿವೀರರು ಸಶಸ್ತ್ರ ಪಡೆಗಳನ್ನು ಹೆಚ್ಚು ತಾರುಣ್ಯಭರಿತ ಮತ್ತು ಟೆಕ್ ಸೆವಿಯನ್ನಾಗಿ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
21ನೇ ಶತಮಾನದಲ್ಲಿ ಯುದ್ಧ ಮಾಡುವ ರೀತಿ ಬದಲಾಗುತ್ತಿದೆ ಎಂದು, ಸಂಪರ್ಕರಹಿತ ಯುದ್ಧದ ಹೊಸ ರಂಗಗಳು ಮತ್ತು ಸೈಬರ್ ಯುದ್ಧದ ಸವಾಲುಗಳನ್ನು ಚರ್ಚಿಸಿದ ಅವರು, ನಮ್ಮ ಸಶಸ್ತ್ರ ಪಡೆಗಳಲ್ಲಿ ತಾಂತ್ರಿಕವಾಗಿ ಮುಂದುವರಿದ ಸೈನಿಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು. ವಿಶೇಷವಾಗಿ ಪ್ರಸ್ತುತ ಯುವ ಪೀಳಿಗೆಯು ಈ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಆದ್ದರಿಂದ ಮುಂಬರುವ ದಿನಗಳಲ್ಲಿ ನಮ್ಮ ಸಶಸ್ತ್ರ ಪಡೆಗಳಲ್ಲಿ ಅಗ್ನಿವೀರರು ಪ್ರಮುಖ ಪಾತ್ರ ವಹಿಸುತ್ತಾರೆ, ಎಂದರು.
ಈ ಯೋಜನೆಯು ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುವುದು ಕುರಿತು ಪ್ರಧಾನಮಂತ್ರಿ ಮಾತನಾಡಿದರು. ಮಹಿಳಾ ಅಗ್ನಿವೀರರು ನೌಕಾ ಪಡೆಯ ಹೆಮ್ಮೆಯನ್ನು ಹೆಚ್ಚಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಮೂರೂ ಪಡೆಗಳಲ್ಲಿ ಮಹಿಳಾ ಅಗ್ನಿವೀರರನ್ನು ಕಾಣಲು ಬಯಸುತ್ತೇನೆ, ಎಂದು ಹೇಳಿದರು. ಸಿಯಾಚಿನ್ ನಲ್ಲಿ ಮಹಿಳಾ ಸೈನಿಕರು ಮತ್ತು ಆಧುನಿಕ ಯುದ್ಧ ವಿಮಾನಗಳ ಹಾರಾಟ ಮಾಡುವ ಮಹಿಳೆಯರ ಉದಾಹರಣೆಗಳನ್ನು ಉಲ್ಲೇಖಿಸಿ, ವಿವಿಧ ರಂಗಗಳಲ್ಲಿ ಮಹಿಳೆಯರು ಹೇಗೆ ಸಶಸ್ತ್ರ ಪಡೆಗಳನ್ನು ಮುನ್ನಡೆಸುತ್ತಿದ್ದಾರೆ, ಎಂಬುದನ್ನು ಪ್ರಧಾನಮಂತ್ರಿ ಸ್ಮರಿಸಿದರು.
ವಿವಿಧ ಪ್ರದೇಶಗಳಲ್ಲಿ ನೇಮಕಗೊಳ್ಳುವುದರಿಂದ ಅವರಿಗೆ ವೈವಿಧ್ಯಮಯ ಅನುಭವಗಳನ್ನು ಪಡೆಯುವ ಅವಕಾಶ ದೊರೆಯುತ್ತದೆ ಮತ್ತು ಅವರು ವಿವಿಧ ಭಾಷೆಗಳನ್ನು ಕಲಿಯಲು ಪ್ರಯತ್ನಿಸಬೇಕು ಮತ್ತು ವಿಭಿನ್ನ ಸಂಸ್ಕೃತಿಗಳು ಮತ್ತು ಜೀವನ ವಿಧಾನಗಳ ಬಗ್ಗೆಯೂ ಕಲಿಯಬೇಕು, ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಸಾಂಘಿಕ ಕೆಲಸ ಮತ್ತು ನಾಯಕತ್ವದ ಕೌಶಲ್ಯವನ್ನು ಗೌರವಿಸುವುದು ಅವರ ವ್ಯಕ್ತಿತ್ವಕ್ಕೆ ಹೊಸ ಆಯಾಮವನ್ನು ನೀಡುತ್ತದೆ, ಎಂದರು. ತಮ್ಮ ಆಯ್ಕೆಯ ಕ್ಷೇತ್ರಗಳಲ್ಲಿ ತಮ್ಮ ಕೌಶಲ್ಯಾಭಿವೃದ್ಧಿಗಾಗಿ ಏಕಕಾಲದಲ್ಲಿ ಕೆಲಸ ಮಾಡುವಾಗ ಹೊಸ ವಿಷಯಗಳನ್ನು ಕಲಿಯುವ ಬಗ್ಗೆ ಕುತೂಹಲದಿಂದ ಇರಬೇಕೆಂದು ಅವರು ಅಗ್ನಿವೀರರನ್ನು ಉತ್ತೇಜಿಸಿದರು.